ಮರ ಕೆಸುವಿನ ಚಟ್ಟಿ
`` ಮಕ್ಕಳೇ, ಚಿನ್ನಮ್ಮತ್ತೆ ಬಂದಿರ್; ಇವತ್ ಮರಕೆಸದ ಚಟ್ಟಿ ಮಾಡುವ, ಆಗ್ದಾ " ಎನ್ನುತ್ತಾ ಅಮ್ಮಮ್ಮ, ದೇವಸ್ಥಾನ ದ ಗುಡ್ಡೆಗೆ ಹೊರಟ ರು . ನಾವು ಮಕ್ಕಳು ಸಹ ಅವರ ಹಿಂದೆ ಯೇ ಹೊರಟೆವು. ಮಳೆಗಾಲ ಶುರುವಾಗಿ, ಮಧ್ಯೆ ಕೆಲವು ದಿನ ``ಹೊಳ" ಆಗಿದ್ದರಿಂದ, ಓಡಾಟ ಸುಲಭ. ಆಗ ದೇವಸ್ಥಾನದ ದಾರಿಯುದ್ದಕ್ಕೂ ದೊಡ್ಡ ಹಾಡಿಯಿದ್ದು, ಅವುಗಳಲ್ಲಿ ಕೆಲವು ಭಾರೀ ಹಳೆಯ ಮರಗಳಿದ್ದವು. ಕೆಲವು ಮರಗಳ ತೊಗಟೆ ಎಲ್ಲಾ ಒಣಗಿ, ಒಣಗಿ, ಒಚ್ಚಿಕೊಂಡು ಬರುವಂತಾಗಿತ್ತು, ಅಂಥಹ ಹಳೆಯ ಮರಗಳೆಂದರೆ, ಮರಕೆಸ, ಮರಬಾಳೆ ಮೊದಲಾದ ಅಪ್ಪಿ ಬೆಳೆಯುವ ಗಿಡಗಳಿಗೆ ತುಂಬಾ ಪ್ರೀತಿ. ಹಳೆ ಮರದ ಕಾಂಡದ ಮೇಲೆ, ನೆಲದಿಂದ ಸುಮಾರು ೧೦ -೨೦ ಅಡಿ ಎತ್ತರದಲ್ಲಿ ಮರಕೆಸಗಳು ಎಲೆಗಳನ್ನು ಹರಡಿ ಬೆಳೆದಿರುವುದು ಸಾಮಾನ್ಯ ದೃಶ್ಯ. ಕೆಲವು ಕಡೆ ಕೈಗೇ ಸಿಗುವಂತೆ ಬೆಳೆಸಿರುತ್ತಿದ್ದ ಮರಕೆಸದ ಕೆಲವು ಎಲೆಗಳನ್ನು ಸಂಗ್ರಹಿಸಿ, ಮನೆಗೆ ವಾಪಸಾದೆವು. ಗದ್ದೆ ಬದಿ ಬೆಳೆಯುವ ಕಾಡು ಕೆಸದ ಎಲೆಯಗಾತ್ರವೇ ಇದ್ದರೂ, ಸ್ವಲ್ಪ ದಪ್ಪ ಎಲೆ, ಸ್ವಲ್ಪ ಹಳದಿ ಬಣ್ಣಕ್ಕಿರುತ್ತಿದ್ದ ಮರಕೆಸದ ಎಲೆಗಳು ರುಚಿ ಜಾಸ್ತಿ ಅಂತೆ.
ಮರಕೆಸದ ಎಲೆಗಳನ್ನು ಸಣ್ಣದಾಗಿ ಕತ್ತರಿಸಿ, ಮೊದಲೇ ಅರೆದಿಟ್ಟುಕೊಂಡಿದ್ದ ಅಕ್ಕಿ ಹಿಟ್ಟಿನ ಜೊತೆ ಹಾಕಿ ಕಲಸಿ, ದೋಸೆ ಕಲ್ಲಿನ ಮೇಲೆ ಅದನ್ನು ಹಚ್ಚಿ, ಬೇಯಿಸಿದಾಗ ತಯಾರಾಗುವುದು ಮರಕೆಸದ ಎಲೆಯ ದೋಸೆ ಅಥವಾ ಚಟ್ಟಿ. ದೋಸೆ ಕಲ್ಲಿನ ಮೇಲೆ ಬೇಯುವಾಗ, ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಾಕಿದರೆ, ರುಚಿ ಜಾಸ್ತಿ. ಮಳೆಗಾಲದ ಬೇಸರದ ದಿನಗಳಲ್ಲಿ, ದಿನಾ ಗಂಜಿ, ಅನ್ನ ತಿಂದು ಬಾಯಿ ರುಚಿ ಕೆಟ್ಟಾಗ, ಅಮ್ಮಮ್ಮ ಮಾಡುತ್ತಿದ್ದ ಹಳೆಕಾಲದ ತಿಂಡಿಗಳಲ್ಲಿ ಮರಕೆಸದ ಚಟ್ಟಿಯೂ ಒಂದು. ಮರಕೆಸು ವಿನ ವಿಶೇಷತೆ ಎಂದರೆ, ರುಚಿಕರವಾಗಿ ಇರುವುದಲ್ಲದೆ, ಬಾಯಿ ತುರಿಕೆ ಬರುವುದಿಲ್ಲ, ಇದೇ ರೀತಿಯ ಚಟ್ಟಿಯನ್ನು ಗೋಯೆಕೆಸಾದ ಎಲೆಯಿಂದಲೂ ಮಾಡಬಹುದು.
ಮಳೆಗಾಲದಲ್ಲಿ ತಯಾ ರಾಗುತ್ತಿರುವ ಮತ್ತೊಂದು ಜನಪ್ರಿಯ ತಿಂಡಿ ಎಂದರೆ ಪತ್ರೊಡೆ. ದೊಡ್ಡ ಕೆಸುವಿನ ಎಲೆಯಿಂದ ಮಾಡುವ ಈ ಪತ್ರೊಡೆ ಎಷ್ಟು ಜನಪ್ರಿಯ ವೆಂದರೆ, ಪತ್ರೊಡೆಗಳಲ್ಲಿ ಹಲವಾರು ತೆರದ ವೈವಿಧ್ಯ ಗಳು, ಬೇಯಿಸುವ ಕ್ರಮ, ಹೆಚ್ಚುವ ಕ್ರಮ, ಇಡೀ ಎಲೆ, ಕತ್ತರಿಸಿದ ಎಲೆ, ಈ ರೀತಿ ನಾನಾ ರುಚಿಯ ಪತ್ರೊಡೆಗಳು ಚಾಲ್ತಿಯಲ್ಲಿವೆ. ಪತ್ರೊಡೆಯ ಜೊತೆ ಕೊಬ್ಬರಿ ಎಣ್ಣೆ ಸೇರಿಸಿ ತಿನ್ನುವ ರುಚಿಯು, ಆಸಾಡಿ ತಿಂಗಳ ಜಿರಾಪತಿ ಮಳೆಯೊಡನೆ ನೆನಪಾಗಲೇಬೇಕು.
ಮಳೆಗಾಲವೆಂದರೆ, ಹಿಂದೆ ಹಳ್ಳಿಗಳಲ್ಲಿ ತರಕಾರಿಗಳೇ ದುರ್ಲಭ. ಎರಡು ಮೂರು ತಿಂಗಳು ಎಡೆಬಿಡದೆ ಆಗ ಸುರಿಯುತ್ತಿದ್ದ ಮಳೆಯಿಂದಾಗಿ, ಮನೆ ಸುತ್ತ ಯಾವುದೇ ತರಕಾರಿ ಅಥವಾ ಸೊಪ್ಪು ಬೆಳೆಯುತ್ತಿರಲಿಲ್ಲ. ನಮ್ಮ ಮನೆಯ ಅಂಗಳದಲ್ಲಿ, ಮಳೆ ಶುರುವಾಗುವ ಸಮಯಕ್ಕೆ ಸರಿಯಾಗಿ, ಉದ್ಕಕ್ಕೂ ಎರಡು ಸಾಲು ತರಕಾರಿ ಬೆಳೆಯುವ ವ್ಯವಸ್ಥೆ ಮಾಡುತ್ತಿದ್ದರು. ಆ ಎರಡು ಸಾಲು ಫಲಭರಿತ ಮಣ್ಣಿನಲ್ಲಿ ಬೆಂಡೆ, ಅಲಸಂಡೆಯ ಬೀಜಗಳನ್ನು ಹಾಕುತ್ತಿದ್ದರು. ಒಂದೆರಡು ತಿಂಗಳಲ್ಲಿ ಸಾಮಾನ್ಯವಾಗಿ ಬೆಂಡೆಗಿಡಗಳು ಕಾಯಿ ಬಿಡುತ್ತಿದ್ದವು. ಮನೆ ಮುಂದಿನ ಈ ಪುಟ್ಟ ತರಕಾರಿ ತೋಟದಲ್ಲಿ ಬೆಂಡೆಕಾಯಿ ಬಿಡಲು ತೊಡಗಿದರೆ, ಒಂದೆರಡು ತಿಂಗಳು ತರಕಾರಿಗಳ ಬರವಿಲ್ಲ. ಚೆನ್ನಾಗಿ ಆದರೆ ಪ್ರತಿ ಎರಡು ದಿನಕ್ಕೊಮ್ಮೆ ಒಂದು ಅಡುಗೆಗಾಗುವಷ್ಟು ಎಳೆ ಬೆಂಡೆಕಾಯಿ ಬಿಡುತ್ತಿತ್ತು. ಆಗ ತಾನೆ ಕುಯ್ದು ತಂದ ಬೆಂಡೆ ಕಾಯಿಯ ಹುಳಿಯ ರುಚಿಯು ಮಳೆಗಾಲದ ನೆನಪುಗಳಲ್ಲಿ ಸೇರಿ ಹೋಗಿದೆ. ಈ ಬೆಂಡೆಗಿಡಗಳ ಮಧ್ಯೆ, ಒಂದೆರಡು ಹೀರೆಕಾಯಿ ಗಿಡಗಳಲ್ಲಿ ಹಬ್ಬಿಕೊಂಡಿ ರುವುದುಂಟು. ನಾಲ್ಕಾರು ವಾರ ಕಳೆದು, ಹೀರೆಕಾಯಿ ಬಿಡತೊಡಗಿದರೆ, ದಿನಾ ನಾಲ್ಕಾರು ಕಾಯಿ ಲಭ್ಯ. ಆದರೆ, ಅದೇಕೋ, ಒಂದೊಂದು ವರ್ಷ ಬೆಂಡೆ, ಹೀರೆಗಳು ಗಿಡವಾಗಿ ಬೆಳೆದರೂ, ಕಾಯಿ ಬಿಡದೇ ಸತಾಯಿಸುವುದುಂಟು. ಪೂರ್ತಿ ಎರಡು ತಿಂಗಳಲ್ಲಿ ನಾಲ್ಕಾರು ಕಾಯಿ ಬಿಟ್ಟು, ನಂತರ ನಿರಾಶೆಗೊಳಿಸುವ ಅಂತಹ ವರ್ಷಗಳಲ್ಲಿ, ಬೇರೆ ತರಕಾರಿಗಳನ್ನು ಹುಡುಕುವುದು ಅನಿವಾರ್ಯ.
ಕಾಟು ಕೆಸದ ಎಲೆಯ ಚಟ್ನಿ , ಕಾಟುಕೆಸದ ಗೆಡ್ಡೆಯ ಹುಳಿ ಮರಸಣಿಗೆ ಪಲ್ಯ ಈ ರೀತಿಯ ಪದಾರ್ಥಗಳು ತಯಾರಾದರೂ, ಇವುಗಳನ್ನು ತಿಂದರೆ ಮಕ್ಕಳ ಬಾಯಿಗೆ ತುರಿಕೆ ಖಚಿತ. ಒಮ್ಮೊಮ್ಮೆ ಬಾಳೆ ದಿಂಡಿನ ಪಲ್ಯ ಮಾಡುವುದುಂಟು - ``ಮಕ್ಕಳೇ, ಬಾಳೆದಿಂಡಿನ ಪಲ್ಯ ಭಾರೀ ಒಳ್ಳೆದು. ವರ್ಷಕ್ಕೆ ಒಂದು ದಿನವಾದ್ರೂ ಬಾಳೆ ದಿಂಡಿನ ಪಲ್ಯ ತಿನ್ಕಂಬ್ರು - ಹೊಟ್ಟೆಲ್ಲಿ ಸೇರುವ ಕೂದಲನ್ನು ಕರಗಿಸುವ ಶಕ್ತಿ ಇದಕ್ಕೆ ಉಂಟು " ಎನ್ನುತ್ತಿದ್ದ ಅಮ್ಮಮ್ಮನ ಲೋಕeನ ಅವರ ಹಿಂದಿನವರಿಂದ ಬಂದ ಬಳುವಳಿಯೇ ಸರಿ. ಬಾಳೆದಿಂಡನ್ನು ಬೆಂಗಳೂರಿನ ಅಂಗಡಿಯಲ್ಲಿ ಈಗಲೂ ಮಾರುವುದು ಅದರ ವೈದ್ಯಕೀಯ ಗುಣದ ಅರಿವಿನಿಂದಾಗಿಯೇ ಇರಬಹುದು.
ತೀರ ಅವಸರದಲ್ಲಿ ಮಳೆಗಾಲದಲ್ಲಿ ತಯಾರಾಗುವ ರುಚಿಕರನಾದ ಸಾರು ಎಂದರೆ ಮುರಿನ ಓಡಿನ ಸಾರು. ಬೇಸಗೆಯ ದಿನಗಳಲ್ಲಿ ಮುರಿನ ಹಣ್ಣನ್ನು (ಪುನರ್ಪುಳಿ) ಮನೆ ಹಿಂದಿನ ಕಾಡಿನಿಂದ ಆರಿಸಿ ತಂದು, ಒಳಗಿನ ತೊಳೆ ಬಿಡಿಸಿ, ಹೊರಗಿನ ಓಡನ್ನು ಮಾತ್ರ ಒಣಗಿಸಿಟ್ಟರೆ, ಮಳೆಗಾಲಕ್ಕೆ ಉಪಯೋಗಕ್ಕೆ ಬರುತ್ತದೆ. ಮುರಿನ ಓಡಿನ ನೀರು ನೀರಾದ ಸಾರು ಪಿತ್ತಕ್ಕೆ ಒಳ್ಳೆಯದಂತೆ! ಈಗಲೂ ಬೆಂಗಳೂರು ಮತ್ತು ಮುಂಬಯಿಯಂತಹ ಮಹಾನಗರಗಳಲ್ಲಿ ಒಣಗಿಸಿದ ಮುರಿನ ಓಡಿನ ಪ್ಯಾಕೆಟ್ಟುಗಳಿಗೆ ಬೇಡಿಕೆ ಇದೆ ಎಂದರೆ, ಈ ಮಾಮೂಲಿ ಹಣ್ಣಿನ ಅಮೂಲ್ಯ ಗುಣ ಮನವರಿಕೆ ಆದೀತು. ಮೊನ್ನೆ ಬೆಂಗಳೂರಿನ ಅವೆನ್ಯೂ ರೋಡಿನಲ್ಲಿ ಗಾಡಿಯಲ್ಲಿಟ್ಟು ಕಳಿತ ಮುರಿನ ಹಣ್ಣನ್ನು ಮಾರುತ್ತಿದ್ದರು - ಬೆಲೆ ಎಷ್ಟು ಎಂದು ಕೇಳಿದೆ - `` ಒಂದು ಕೆ.ಜಿ.ಗೆ ೧೪೦ ರೂಪಾ ! " ಅಬ್ಬಾ, ಮುರಿನ ಹಣ್ಣೇ !
ಬೇಸಗೆಯಲ್ಲಿ ಮಾಡಿಟ್ಟ ಮಾವಿನ ಹಣ್ಣಿನ ಹಣ್ ಚೆಟ್ಟಿನಿಂದ ತಯಾರಿಸುವ ಗೊಜ್ಜು ಮಳೆಗಾಲದ ನಾಲಗೆಗೆ ರುಚಿಕರ. ಹುಳಿ - ಸಿಹಿ ರುಚಿಯ ಮಾವಿನ ರಸದ ಮುದ್ದೆಯಾದ ಹಣ್ ಚೆಟ್ನ್ನು ಕತ್ತರಿಸಿ, ಅರೆದು ತಯಾರಿಸುವ ಗೊಜ್ಜು ರುಚಿಗೆ ಮಾತ್ರ ಪರವಾಗಿಲ್ಲ ; ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನುತ್ತಿದ್ದರು ಅಮ್ಮಮ್ಮ . ಜಡಿಮಳೆಯಲ್ಲಿ ತಯಾರಾಗುತ್ತಿದ್ದ ಹಲಸಿನ ತೊಳೆಯ ಪಲ್ಯವೂ ಈಗ ಅಪರೂಪದ್ದಾಗಿದೆ. ಬೇಸಿಗೆಯಲ್ಲಿ ಸಿಗುವ ಹಲಸಿನ ತೊಳೆಗಳನ್ನು ಬಿಡಿಸಿ, ದೊಡ್ಡ ಜಾಡಿಗೆ ತುಂಬಿಸು ತ್ತಾರೆ. ಆ ಜಾಡಿಯ ತುಂಬಾ ಉಪ್ಪು ನೀರು - ಈ ರೀತಿ ಉಪ್ಪು ನೀರಿನಲ್ಲಿ ನೆನೆಸಿದ ಹಲಸಿನ ಸೊಳೆಗಳು ಎರಡು ತಿಂಗಳುಗಳಾಗುವಾಗ ಗಟ್ಟಿಯಾಗಿ, ಒಗರು ಒಗರಾಗಿ ಇರುತ್ತದೆ! ಅದನ್ನು ಕತ್ತರಿಸಿ ಪಲ್ಯ ಮಾಡಿ, `` ತಿನ್ನಿ ಮಕ್ಕಳೇ " ಎಂದು ಬಡಿಸಿದಾಗ, ನಮಗ್ಯಾರಿಗೂ ಅದನ್ನು ತಿನ್ನಲು ಸೇರುತ್ತಿರಲಿಲ್ಲ. ನೀರಿನಲ್ಲಿ ನೆನದ ಆ ಸೊಳೆಗಳು ಒಂದು ರೀತಿಯ ವಾಸನೆ ಮತ್ತು ಒಗರು ರುಚಿ ಪಡೆದಿರುತ್ತಿದ್ದುದರಿಂದ, ಆ ದಿನ ಬರೀ ಉಪ್ಪಿನಕಾ ರಸದಲ್ಲೇ ಊಟ ಮುಗಿಸುತ್ತಿದ್ದೆವು! ಇವೆಲ್ಲಾ ತಿನಿಸುಗಳ ನಡುವೆಯೂ, ಮಳೆಗಾಲದಲ್ಲಿ ಊಟಕ್ಕೆ ಉತ್ತಮವೆಂದರೆ ಮಿಡಿ ಉಪ್ಪಿನ ಕಾ. ಒಳ್ಳೆಯ ಜೀರಿಗೆ ಮಾವಿನ ಮಿಡಿಯ ಉಪ್ಪಿನ ಕಾಯಿ ರಸ ದೊರೆತರೆ, ಊಟಕ್ಕೂ ರುಚಿ, ಆರೋಗ್ಯಕ್ಕೂ ಒಳ್ಳೆಯದು.
ಮಳೆಗಾಲದ ಅಪರೂಪದ ಅಡುಗೆಗಳ ಕುರಿತು ಇಷ್ಟು ಬರೆದ ನಂತರ, ಒಂದು ಕೊರತೆ ಕೆಲವರಿಗೆ ಕಂಡರೂ ಕಾಣಬಹುದು - ಅದೆಂದರೆ, ಮಳೆ ಸುರಿದ ನಂತರ, ಆ ಜೀವಜಲದಲ್ಲಿ ಉದಯಿಸುವ ಹಲವಾರು ಜೀವಿಗಳ ಅಡುಗೆ ಕೂಡ ಮಳೆಗಾಲದ ವಿಶೇಷವಲ್ಲವೇ? ಹೊಸ ನೀರಿಗೆ ಬರುವ ವಿನು , ಮಳೆಬಿದ್ದ ನಂತರ ಕೆಲವರು ಸಂಗ್ರಹಿಸುವ ಜಾಗಟೆ, ಮತ್ತಿತರ ಜಲಚರಗಳು, ಮಳೆ ಬಿದ್ದಾಗ ಗುಡ್ಡೆ ತುಂಬಾ ಎದ್ದೇಳುವ ಅಣಬೆಗಳು ಇವೆಲ್ಲವನ್ನೂ ಅಡುಗೆಗೆ ಬಳಸುವರು ನಿಜ; ಆ ಕುರಿತು ಸ್ವಾನುಭವ ಇಲ್ಲದ್ದರಿಂದ , ಅಷ್ಟರ ಮಟ್ಟಗಿನ ಕೊರತೆ ಈ ಲೇಖನದಲ್ಲುಂಟು; ಅಂಥ ಅಡುಗೆಗೂ ಅದರದ್ದೇ ಆದ ಗೌರವಯುತ ಸ್ಥಾನವು ನಮ್ಮ ಜನಪದರಲ್ಲಿ ಇರುವುದರಿಂದಾಗಿ, ಅಂಥ ವಿಚಾರಗಳ ಅರಿವಿರುವವರ ನೆರವಿನಿಂದ ಬರೆದಾಗ ಮಾತ್ರ, ಸೂಕ್ತ ಚಿತ್ರಣವನ್ನು ನೀಡಲು ಸಾಧ್ಯ.
ಎಂ. ಶಶಿಧರ ಹೆಬ್ಬಾರ್ ಹಾಲಾಡಿ