ಗೋಯ್ ಬೀಜ
ಬಿಸಿಲುಗಾಲದ ಬೆಳದಿಂಗಳ ರಾತ್ರಿ; ಹಗಲಿಡೀ ಬಿಸಿಲಿನ ಬೇಗೆಗೆ ಬಸವಳಿದ ದೇಹ, ರಾತ್ರಿಯ ಬೆಳದಿಂಗಳ ಸ್ನಿಗ್ದ ವಾತಾವರಣವನ್ನು ಸುಖಿಸುತ್ತಿತ್ತು. ತಿಂಗಳ ಬೆಳಕಿನಲ್ಲಿ ತಂಗಾಳಿ ಬೀಸುತ್ತಿದ್ದಾಗ, ನಾವೆಲ್ಲ ತಟ್ಟವಟ್ಟು ಜೋಯಿಸರ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದೆವು. ಆ ದಿನ ರಾಮನವಮಿಯ `ವಸಂತ' ಅಂದರೆ ಫಲಹಾರ! ಪೂಜೆ ಮುಗಿದ ನಂತರ ಖಾದ್ಯ ತಿನ್ನಲು ಕುಳಿತೆವು - ಪಾನಕ ಮತ್ತು ಅಂದಿನ ವಿವಿಧ ಬಗೆಯ ರುಚಿಕರ ಖಾದ್ಯ ತಿನ್ನಲು. ಕೋಸಂಬರಿ, ಕಡಲೆಕಾಳಿನ ಕೋಸುಂಬರಿ, ಹಲಸಿನ ಸೊಳೆ, ಮೊದಲಾದ ತಿನಿಸುಗಳ ಜೊತೆ ಗೋಡಂಬಿ ಸಿಹಿ ಪಲ್ಯವನ್ನು ಬಡಿಸಿದ್ದರು. ಎಳೆಗೋಡಂಬಿಯನ್ನು ಬೆಲ್ಲ ಮತ್ತು ಕಾಯಿತುರಿಯ ಜೊತೆ ಸೇರಿಸಿದರೆ, ರುಚಿಯಾದ ತಿನಿಸು ಸಿದ್ಧ.
ಗೋವೆ ಬೀಜದ ಮೂಲವು ಪರದೇಶದಲ್ಲಿದೆ. ಗೋವಾಕ್ಕೆ ಬಂದ ಪೋರ್ಚುಗೀಸರ ಮೂಲಕ ಅದು ನಮ್ಮ ದೇಶವನ್ನು ಪ್ರವೇಶಿಸಿತು ಎಂದು ಸಸ್ಯಶಾಸ್ತ್ರಜ್ಞರು ಗುರುತಿಸಿದ್ದಾರೆ. ಅದು ಯಾವ ದೇಶದ್ದಾದರೇನು, ಅದರ ರುಚಿಗೆ ನಾವೆಲ್ಲ ಮಾರು ಹೋಗಿ ಅದನ್ನು ನಮ್ಮ ಆಪ್ತ ತಿನಿಸುಗಳ ವಲಯಕ್ಕೆ ಸೇರಿಸಿಕೊಂಡು ಬಿಟ್ಟಿದ್ದೇವೆ ಎಂಬುದು ಖಚಿತ. ಪೂಜೆ ಪುರಸ್ಕಾರದ ಅಡುಗೆಗಳಿಗೂ ಗೋಡಂಬಿಯ ಬಳಕೆ ಉಂಟು. ರಾಮನವಮಿಯ ಪನಿವಾರದಲ್ಲೂ ಪ್ರವೇಶಿಸಿರುವ ಗೋವೆಬೀಜವನ್ನು ಪರದೇಶಿ ಎನ್ನಲು ಮನಸ್ಸು ಒಪ್ಪುವುದಿಲ್ಲ. ಕರಾವಳಿಯ ಆರ್ಥಿಕ ಚಟುವಟಿಕೆಗಳಲ್ಲಿ ಮತ್ತು ರಫ್ತು ವ್ಯಾಪಾರದಲ್ಲೂ ಗೋವೆಬೀಜದ ಪಾಲು ಮಹತ್ವದ್ದು.
ಗುಡ್ಡೆ ಬದಿಯ ಬಂಜರು ಜಾಗಗಳಲ್ಲಿ ಚೆನ್ನಾಗಿ ಬೆಳೆಯುವ ಗೋವೆ ಮರಗಳು ಒಂದು ರೀತಿಯಲ್ಲಿ ಆದಾಯಕ್ಕೆ ವ್ಯಾಲ್ಯೂ ಎಡಿಶನ್ ಎನ್ನಬಹುದು. ಉತ್ತಮ ಜಮೀನಿನಲ್ಲಿ ಪಾಲು ಕೇಳದೇ ಹಾಡಿಯ ಮೂಲೆಯಲ್ಲಿ ಅಥವಾ ಬೋಳು ಗುಡ್ಡದಲ್ಲಿ ಬೆಳೆದು, ಹೆಚ್ಚು ಖರ್ಚಿನ ಆರೈಕೆ ಬೇಡದೇ ಗೋವೆ ಬೀಜವನ್ನು ಕೊಡುವ ಈ ಮರಗಳು ಸಣ್ಣ ರೈತರ ಪ್ರಮುಖ ಆದಾಯ ಮೂಲವೆನ್ನಲು ಅಡ್ಡಿಲ್ಲ. ಗೋವೆ ಬೀಜದ ರುಚಿಯೇ ಅದಕ್ಕಿರುವ ಬೆಲೆಯ ಗುಟ್ಟು.
ಹಸಿ ಗೋವೆ ಬೀಜದ ಪಲ್ಯದ ಕಥೆ ಡೊಡ್ಡದಿದೆ. ಇನ್ನೂ ಪೂರ್ತಿ ಬೆಳೆಯದ, ಆದರೆ ಹದವಾಗಿ ಬಲಿತ ಹಸಿ ಗೋವೆ ಬೀಜಗಳನ್ನು ಸಂಗ್ರಹಿಸಬೇಕು. ಆದರಿಂದ ಒಳಗಿನ ಬೀಜಗಳನ್ನು ಬೇರ್ಪಡಿಸುವ ಕೆಲಸ ಸ್ವಲ್ಪ ಸೂಕ್ಷ್ಮವಾದದ್ದು. ಮೈ ಕೈಗೆ ಸೊನೆ ತಾಗಿದರೆ ಗಾಯ ಖಚಿತ. ಎಳೆಯ ಹಸಿ ಬೀಜಗಳನ್ನು ಸಂಗ್ರಹಿಸಿ, ಅದಕ್ಕೆ ತೆಂಗಿನ ಕಾಯಿ ತುರಿಯ ಒಗ್ಗರಣೆ ಜೊತೆ, ನೀರುಬೆಲ್ಲ ಬೆರೆಸಿದಾಗ, ಗೋವೆ ಬೀಜದ ಪಲ್ಯ ತಯಾರಾದಂತೆ. ಈ ಸೀಪಲ್ಯದ ರುಚಿಯೂ ಕರಾವಳಿಯ ಅಪರೂಪದ ಬಾಲ್ಯದ ಪಟ್ಟಿಯಲ್ಲಿ ಸೇರಿ ಹೋಗಿದೆ.
ಗೋವೆ ಬೀಜವನ್ನು ಸುಟ್ಟು ತಿನ್ನುವ ಕೆಲಸವೂ ವಿಶಿಷ್ಟ. ಗೋವೆಬೀಜವನ್ನು ಹುರಿಯಲು ಒಂದು ದೊಡ್ಡ ಮಡಕೆ ಓಡಿನ ಅವಶ್ಯಕತೆ ಉಂಟು. ಮಡಕೆ ಓಡು ಸಿಗದಿದ್ದರೆ ದೊಡ್ಡ ಡಬ್ಬಿ ತಗಡು ಆದರೂ ಪರವಾಗಿಲ್ಲ. ನಮ್ಮ ಮನೆಗೆ ಮಕ್ಕಳು, ಬಂಧುಗಳು ಬಂದಾಗ, ಗೋವೆಬೀಜ ಸುಡುವ ಸಂಭ್ರಮ ಇಲ್ಲಿ ನೆನಪಾಗುತ್ತದೆ. ಸಂಜೆಯ ಸಮಯ ಮನೆ ಮುಂದಿನ ಅಂಗಳದ ಮೂಲೆಯ ಒಲೆಯಲ್ಲಿ ಬೆಂಕಿ ಹಚ್ಚಿ ಅದರ ಮೇಲೆ ಒಂದು ದೊಡ್ಡ ತಗಡನ್ನು ಇಡುತ್ತಾರೆ. ಚೆನ್ನಾಗಿ ಒಣಗಿಸಿದ ಬೀಜಗಳನ್ನು ತಂದು ಅದರ ಮೇಲೆ ಹರವುತ್ತಾರೆ. ಇದೆಲ್ಲಾ ಸಾಮಾನ್ಯವಾಗಿ ಅಮ್ಮಾಮ್ಮನ ಕೆಲಸ. ನಾಲ್ಕೈದು ನಿಮಿಷಗಳಲ್ಲಿ ಗೋವೆಬೀಜಗಳು ಸೊನೆ ಕಾರತೊಡಗುತ್ತವೆ. `ಹಿಸ್' `ಪುಸ್' ಎಂದು ಸದ್ದು ಮಾಡುತ್ತಾ ಕಪ್ಪನೆಯ ಸೊನೆಯನ್ನು ದೂರಕ್ಕೆ ಸಿಡಿಸುವೂದು ಉಂಟು. ಗೋವೆ ಬೀಜವನ್ನು ಸುಡುವುದನ್ನು ನೋಡುತ್ತಾ ನಿಂತಿರುವ ಮಕ್ಕಳು ದೂರ ಹೋಗಬೇಕೆಂಬ ಸೂಚನೆ ಅದು. ಅದರ ಸೊನೆ ಮೈಗೋ, ಮುಖಕ್ಕೋ ತಾಗಿದರೆ ಗಾಯವಾಗಿ ಕಲೆಯಾಗಿ ಬಿಟ್ಟೀತು ಎಂಬ ಭಯ. ಗೋವೆಬೀಜಗಳು ಸೊನೆ ಕಾರಿದ ಕೂಡಲೆ ಕೆಳಗಿನ ಒಲೆಯಿಂದ ಚೂರು ಬೆಂಕಿಯನ್ನು ಎತ್ತಿ ಮೇಲಿನ ತಗಡಿಗೆ ಹಾಕುತ್ತಾರೆ. ಒಮ್ಮೆಗೇ `ಭಗ್' ಎಂದು ಇಡೀ ತಗಡಿಗೆ ಬೆಂಕಿ ಹತ್ತುತ್ತದೆ. ಸೊನೆ ಕಾರಿದ ಬೀಜಗಳೆಲ್ಲ ಧಗಧಗನೆ ಬೆಂಕಿಯಿಂದ ಉರಿಯಲು ಆರಂಭವಾಗುತ್ತದೆ. ಒಂದೈದು ನಿಮಿಷಗಳಲ್ಲಿ ಅವನ್ನೆಲ್ಲ ಈಚೆಗೆ ನೆಲಕ್ಕೆ ಸುರಿದು ಬೆಂಕಿ ಆರಿಸಿ ಇನ್ನೂ ಬಿಸಿ ಇರುವಾಗಲೇ ಕಲ್ಲಿನಿಂದ ಕುಟ್ಟಬೇಕು. ಆಗ ಹೊರಗಿನ ಕವಚ ಬೇರೆಯಾಗಿ ಒಳಗಿನ ಬೀಜ ಕೈಗೆ ಸಿಗುತ್ತದೆ. ಕಲ್ಲಿನಿಂದ ಕುಟ್ಟಿ ಕವಚ ಬೇರೆ ಮಾಡುವುದು ಸೂಕ್ಷ್ಮವಾದ ಕೆಲಸ. ಬೀಜಗಳನ್ನು ಮನೆಗೆ ತಂದ ನಂತರ, ಬಾಕಿ ಉಳಿದ ಕೆಲಸ ಒಂದೇ - ತಿನ್ನುವ ಕೆಲಸ. ಬಿಸಿ ಬಿಸಿ ಗೋವೆ ಬೀಜದ ಜೊತೆ ಹುರಿದ ಹಲಸಿನ ಹಪ್ಪಳ ಇದ್ದರಂತೂ ರುಚಿಯು ದುಪ್ಪಟ್ಟಾದೀತು!
ಗೋವೆ ಹಣ್ಣಿನ ರುಚಿ ಅಷ್ಟೇನೂ ವಿಶೇಷ ಇಲ್ಲ. ಕನರು, ಕನರು ರುಚಿಯ, ಹುಳಿ ಸಿಹಿ ಮಿಶ್ರಣದ ಗೋವೆ ಹಣ್ಣನ್ನು ಜಾಸ್ತಿ ತಿಂದರೆ ಕೆಮ್ಮು ಬರುತ್ತದೆಂದು ಹಿರಿಯರು ಗದರಿಸುತ್ತಿದ್ದರು. ಆದರೂ ಬೇಸಿಗೆಯ ಬಿಸಿಗೆ ಹೆಚ್ಚು ರಸವಿರುವ ಗೋವೆ ಹಣ್ಣನ್ನು ತಿಂದರೆ ಬಾಯಾರಿಕೆ ಕಡಿಮೆ ಆದೀತು ಎಂದು ಮಕ್ಕಳು ಗೋವೆ ಹಣ್ಣನ್ನು ತಿಂದದ್ದೇ ತಿಂದದ್ದು. ಅದರ ರಸ ಬಿದ್ದ ಜಾಗದಲ್ಲಿ ಬಟ್ಟೆ ಪೂರ್ತಿ ಕಲೆ ಕಲೆ! ಬಿಳಿ ಬಿಳಿ ಅಂಗಿಯ ಗೋವೆ ಹಣ್ಣಿನ ಗಾಯ ಮುಗಿಯುವ ಸಮಯಕ್ಕೆ ಕೆಂಪು ಕೆಂಪು ಕಲೆಗಳಿಂದ ತುಂಬಿ ಹೋಗುತ್ತಿತ್ತು! ನಾವು ಓದಿದ ಹೈಸ್ಕೂಲಿನ ಆಟದ ಮೈದಾನದ ಸುತ್ತಲೂ ಹತ್ತಾರು ಗೋವೆ ಮರಗಳು ಒಂದೊಂದು ಮರದಲ್ಲಿ ರುಚಿಯ ಹಣ್ಣುಗಳು ಮಧ್ಯಾಹ್ನ ಊಟಕ್ಕೆ ಬಿಟ್ಟಾಗ, ಬಣ್ಣ ಬಣ್ಣದ ಗೋವೆ ಹಣ್ಣುಗಳಿಗೆ ಕಲ್ಲು ಹೊಡೆದು ಬೀಳಿಸುವುದೇ ನಮ್ಮ ಕೆಲಸ. ಗೋವೆ ಹಣ್ಣುಗಳನ್ನು ನಮ್ಮ ಕರಾವಳಿಯಲ್ಲಿ ಗಂಟಿಗೆ ಹಾಕುವುದೇ ಜಾಸ್ತಿ. ಗೋವಾದಲ್ಲಿ ಫೆನ್ನಿ ತಯಾರಿಸಲು ಉಪಯೋಗವಾಗುತ್ತದೆ. ಘಟ್ಟದ ಮೇಲಿನ ಊರುಗಳಲ್ಲಿ ಗೋವೆ ಹಣ್ಣನ್ನು ಕುಕ್ಕೆಯಲ್ಲಿಟ್ಟು ಮಾರುವುದೂ ಉಂಟು. ಮುಖ್ಯವಾಗಿ ಶಾಲೆ ಮಕ್ಕಳೇ ಅದಕ್ಕೆ ಗಿರಾಕಿ.
ಈ ವರ್ಷ ಗೋವೆ ಬೀಜಕ್ಕೆ ಒಳ್ಳೆಯ ಬೆಲೆ ಬಂದಿದೆ. ಕರಾವಳಿಯ ಗೋವೆ ಬೀಜದ ಕಾರ್ಖಾನೆಗಳು ಈ ಸುತ್ತಲಿನ ಹಲವರಿಗೆ ಉದ್ಯೋಗ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಕಚ್ಛಾ ಗೋಡಂಬಿಯನ್ನು ವಿದೇಶದಿಂದ ತರಿಸಬೇಕಾದ ಪರಿಸ್ಥಿತಿಯು, ಆ ಉದ್ಯಮಕ್ಕೆ ಒಂದು ಅನಿಶ್ಟತತೆಯನ್ನು ರೂಪಿಸಿದೆ ಎನ್ನಬಹುದು. ಮುಖ್ಯವಾಗಿ ರಫ್ತನ್ನು ಅವಲಂಭಿಸಿರುವ ಗೋಡಂಬಿ ಉದ್ಯಮವು ವಿಶ್ವದೆಲ್ಲೆಡೆ ಹರಡಿರುವ ರಿಸೆಶನ್ನಿಂದಾಗಿ, ಹೆಚ್ಚಿನ ಏರುಪೇರಿಗೆ ಒಳಗಾಗುವ ಸಂಭವವು ಸಹಜವೇ .
ಎಂ. ಶಶಿಧರ ಹೆಬ್ಬಾರ್ ಹಾಲಾಡಿ
Wednesday, May 27, 2009
maavina midi
ಮಾವಿನ ಮಿಡಿ
ಗೋರಾಜೆ ಶಾಲೆಯಿಂದ ಮನೆಗೆ ವಾಪಾಸು ಬರುವಾಗ, ಹುಡುಗರಲ್ಲಿ ಒಂದು ಸುದ್ಧಿ ಹಬ್ಬಿತು. `ಮುತ್ತಯ್ಯ ಶೆಟ್ರ ಮನೆ ಹತ್ತಿರ ಮಾವಿನಮಿಡಿ ಕೊಯ್ತರಂಬ್ರು' ನಮ್ಮ ಹುಡುಗರ ಸೈನ್ಯ, ದಾರಿ ಬದಲಿಸಿ, ನೆಟ್ಟಗೆ ಮುಡಾರಿಯ ಹಾಡಿದಾರಿ ಹಿಡಿದು, ಮುತ್ತಯ್ಯ ಶೆಟ್ರ ಮನೆ ಹತ್ತಿರ ಸಾಗಿತು. ಗುಡ್ಡೆ ಬದಿಯ ಎತ್ತರವಾದ ಮಾವಿನ ಮರದಲ್ಲಿ ಯಾರೋ ಕುಳಿತು ಮಾವಿನ ಮಿಡಿಗಳನ್ನು ಕೊಯ್ಯುತ್ತಿದ್ದುದು ದೂರದಿಂದಲೇ ಕಾಣುತ್ತಿತ್ತು. ಮರದ ಬುಡಕ್ಕೆ ಹೋಗಿ ನೋಡಿದರೆ ನಾಲ್ಕೆಂಟು ಮಂದಿ ನೆರೆಹೊರೆಯವರು ಚೀಲ ಅಥವಾ ಕುಕ್ಕೆ ಹಿಡಿದುಕೊಂದು ತಲೆ ಮೇಲೆತ್ತಿ, ಮಾವಿನ ಮರದ ತುದಿಯನ್ನೇ ನೋಡುತ್ತಿದ್ದರು. ಮೇಲೇರಿದಾತ ಮಾವಿನ ಮಿಡಿಯನ್ನು ಕೊಯ್ಯುತ್ತಿದ್ದ. ಅವನ ಕೈ ತಪ್ಪಿ ಕೆಳಗೆ ಬಿದ್ದಿದ್ದ ಮಿಡಿಗಳನ್ನು ನಾವೆಲ್ಲ ಆರಿಸಿ ತಿನ್ನುತ್ತಿದ್ದೆವು. ಮಕ್ಕಳೆಲ್ಲ ಮನೆಗೆ ಹೋಯಿನಿ? ಎಂದು ಗದರಿಸಿದ್ದು ಯಾರೆಂದು ನೋಡಿದರೆ ನಮ್ಮ ಅಮ್ಮಮ್ಮಾ ಮಾವಿನ ಮಿಡಿ ತರಲು ಅವರೂ ಬಂದು, ಆ ಮರದ ಬುಡದಲ್ಲಿ ನಿಂತಿದ್ದರು. ನಾಲ್ಕಾರು ಮಿಡಿತಿಂದು ನಾವೆಲ್ಲ ಮನೆಗೆ ಹೋದೆವು. ಸ್ವಲ್ಪ ಹೊತ್ತಾದ ನಂತರ ಒಂದು ಕುಕ್ಕೆಯ ತುಂಬ ಮಾವಿನ ಮಿಡಿಯ ವಾಸನೆ ಘಂ ಎಂದು ತುಂಬಿಕೊಂಡಿತು. ಅದಾಗಲೇ ಸಂಜೆಗತ್ತಲು. ಅಮ್ಮಮ್ಮ ಮೆಟ್ಟು ಕತ್ತಿಯ ಮುಂದೆ ಕುಳಿತು, ಮಾವಿನ ಮಿಡಿಗಳನ್ನು ಸೋಸಲು ತೊಡಗಿದರು. `ಇವತ್ತು ರಾತ್ರಿಯೇ ಉಪ್ಪಿಗೆ ಹಾಕಿ ಇಡ್ಕ್ , ಮತ್ತೆ ಹಾಂಗೆ ಬಿಟ್ರೆ ಮಿಡಿ ಹಾಳಾತ್' ಎನ್ನುತ್ತಾ ಒಂದೊಂದೇ ಮಿಡಿಯನ್ನು ಆರಿಸಿ ಅದರ ಬೊಟ್ಟು ಎಷ್ಟು ಬೇಕೋ ಉಳಿಸಿಕೊಂಡು ದಂಟನ್ನು ಕತ್ತರಿಸಿ ಮತ್ತೊಂದು ಕಡೆ ರಾಶಿ ಹಾಕುತ್ತಿದ್ದರು.
ಉಪ್ಪಿನಕಾಯಿ ಮಾಡಲು ಆರಿಸುವ ಮಾವಿನ ಮಿಡಿಗೆ ಅದರದ್ದೇ ಆದ ಒಂದು ಹದ ಇದೆ, ಮಿಡಿಗಳು ಹದವಾಗಿ ಬಲಿತಿರಬೇಕು. ಒಳಗಿರುವ ಕೊಂಗಿಲ ಸ್ವಲ್ಪ ಮೃದುವಾಗಿರಬೇಕು. ಗೊರಟು ಆಗಲು ಆರಂಭವಾಗಿರಬಾರದು. ಮಿಡಿ ಕೊಯ್ಯುವಾಗ ಮಿಡಿಗೆ ಗಾಯವಾಗಿರಬಾರದು, ಮಾವಿನ ಮಿಡಿ ಬಿಸಿಲಿಗೆ ಸುಟ್ಟ್ಟು ಕಪ್ಪಾಗಿರಬಾರದು, ಸೊನೆ ಸುಟ್ಟಿರಬಾರದು. ಒಂದೇ ಗಾತ್ರದ ಮಿಡಿಗಳನ್ನು ಆರಿಸಿ ಪ್ರತ್ಯೇಕಿಸಿದ ನಂತರ ಅಮ್ಮಮ್ಮ ಉಪ್ಪಿನ ಭರಣಿಯಲ್ಲಿ ತುಂಬುತ್ತಿದ್ದರು.
ದೊಡ್ಡ ಪಾತ್ರೆಗೆ ತಳದಲ್ಲಿ ಸ್ವಲ್ಪ ಕಲ್ಲು ಉಪ್ಪನ್ನು ಹಾಕಿ, ಅದರ ಮೇಲೆ ಒಂದು ಪದರ ಮಾವಿನ ಮಿಡಿ ಹಾಕುತ್ತಾರೆ. ಅದರ ಮೇಲೆ ಪುನಃ ಒಂದಿಂಚು ಉಪ್ಪಿನ ಪದರ ಅದರ ಮೇಲೆ ಮಿಡಿ ಪುನಃ ಉಪ್ಪಿನ ಪದರ ಈ ರೀತಿ ಪಾತ್ರೆ ತುಂಬುವ ತನಕ ಮಿಡಿ ಮತ್ತು ಉಪ್ಪು ತುಂಬಿಸಿ ಪಾತ್ರೆಯ ಮೇಲೆ ಭಾರಕ್ಕೆಂದು ಸೀತಾನದಿಯಿಂದ ತಂದ ದೊಡ್ಡ ಒರೆಯುವ ಕಲ್ಲುಗಳನ್ನು ಇಡುತ್ತಾರೆ , ಆ ಕಲ್ಲುಗಳ್ಯಾಕೆ `ಮಿಡಿ ಸಮಾ ಚಿರುಟಬೇಕು'.
ಒಂದೆರಡು ದಿನ ಉಪ್ಪಿನಲ್ಲಿ ಕುಳಿತ ಮಿಡಿಗಳು ಚಿರುಟುತ್ತವೆ, ಕಲ್ಲು ಉಪ್ಪು ಮಿಡಿಯ ನೀರನ್ನು ಹೀರಿಕೊಂಡು ಪಾತ್ರೆಯ ತುಂಬಾ ಉಪ್ಪಿನ ನೀರು ತುಂಬುತ್ತದೆ.-ಮಾವಿನ ಮಿಡಿಗಳು ಗಾತ್ರದಲ್ಲಿ ಚಿಕ್ಕದಾಗಿ ಚಿರುಟುತ್ತವೆ. ಆ ಮಿಡಿಗಳನ್ನು ಆರಿಸಿ ನೆರಳಿನಲ್ಲಿ ಒಣಗಿಸಬೇಕು. ಅಮ್ಮಮ್ಮಾ ಮಿಡಿಗಳನ್ನು ಆರಲು ಹಾಕುತ್ತಿದ್ದ ಜಾಗವೆಂದರೆ ಮಧ್ಯದ ಪಡಸಾಲೆಯ ನೆಲದಲ್ಲಿ. ಉಪ್ಪಿನಲ್ಲಿ ಚಿರುಟಿದ ಮಿಡಿಗಳು ಪಡಸಾಲೆಯ ನೆಲದಲ್ಲಿ ಹರಡಿಕೊಂಡಾಗ ಮನೆ ತುಂಬ ಆ ಮಿಡಿಯದೇ ಪರಿಮಳ. ಅಮ್ಮಮ್ಮನ ಕಣ್ಣು ತಪ್ಪಿಸಿ ನಾವು ಒಂದೊಂದೇ ಮಿಡಿಯನ್ನು ತಿನ್ನುವುದು ಉಂಟು. ನೀರಿಗೆ ಹಾಕಿದ ಮಿಡಿಗಳಲ್ಲಿ ಒಂದೊಂದು ಬಣ್ಣಗೆಟ್ಟು ನೀರು ನೀರಾಗಿ ಇರುತ್ತಿತ್ತು. ಅದನ್ನು ತಿನ್ನಲು ಪರವಾನಗಿ ಉಂಟು, ಏಕೆಂದರೆ ಆ ಮಿಡಿಯನ್ನು ಉಪ್ಪಿನಕಾಯಿ ಮಾಡಿದರೆ ಬೇಗ ಕೆಟ್ಟು ಹೋಗುತ್ತದಂತೆ.
`ಮಿಡಿ ನೆನಸಿದರೆ ಸಾಕಾ? ಮೆಣಸಿನ ಕಾಯಿ ತರ್ಕಲೆ? ಅಂಗಡಿಯಿಂದ ಒಳ್ಳೆಯ ಮೆಣಸಿನ ಕಾಯಿ ತಂದು ಉಪ್ಪಿನಕಾಯಿ ಮಾಡುವ ಸಂಭ್ರಮ. ಮೆಣಸಿನ ಕಾಯಿಯನ್ನು ಚೆನ್ನಾಗಿ ಒಣಗಿಸಿ ಅದನ್ನು ಸ್ವಲ್ಪ ಕುಟ್ಟಿ ನಂತರ ಅರೆಯುವ ಕಲ್ಲಿನಲ್ಲಿ ಹಾಕಿ ಅರೆಯುವಿಕೆ! ಆಗ ಇನ್ನೂ ಮೆಣಸಿನ ಪುಡಿ ಮಾಡುವ ಮಿಲ್ ನಮ್ಮೂರಿಗೆ ಬಂದಿರಲಿಲ್ಲ. ದೊಡ್ಡ ಅರೆಯುವ ಕಲ್ಲಿನಲ್ಲಿ ಮೆಣಸಿನ ಕಾಯಿ ಹಾಕಿ ಕುದಿಸಿದ ಉಪ್ಪು ನೀರನ್ನು ಬೆರೆಸಿ, ಚೆನ್ನಾಗಿ ಅರೆಯುವ ಕೆಲಸ ನಿಜಕ್ಕೂ ಕಷ್ಟದ್ದು. ಅರೆಯುವಾಗ ಸಾಸಿವೆ, ಇಂಗು ಬೆರೆಸುತ್ತಿದ್ದರು. ಅರೆದು ಅರೆದು ಒಳ್ಳೆಯ ಉಪ್ಪಿನಕಾಯಿ ರಸ ತಯಾರಾದಾಗ ಪಿಂಗಾಣಿ ಜಾಲಿ ಅಟ್ಟದಿಂದ ಕೆಳಗಿಳಿಯುತ್ತದೆ. ಚೊಕ್ಕಟ ಮಾಡಿದ ದೊಡ್ಡ ಜಾಲಿಯಲ್ಲಿ ಚಿರುಟಿದ ಮಾವಿನ ಮಿಡಿಗಳನ್ನು ಹಾಕಿ, ಮೆಣಸಿನ ಕಾಯಿ ರಸವನ್ನು ತುಂಬಿಸಿದರೆ ಉಪ್ಪಿನಕಾಯಿ ತಯಾರು. ಪಿಂಗಾಣಿ ಭರಣಿಯ ಬಾಯಿಗೆ ಬಟ್ಟೆ ಸುತ್ತಿ ಮುಚ್ಚಳವನ್ನು ಭದ್ರವಾಗಿ ತಿರುಪಿ, ಪುನಃ ಅಟ್ಟದ ಮೇಲೆ ಇಡುತ್ತಾರೆ. `ಅದೇನಿದ್ದರೂ ಈ ಜಾಲಿಯ ಉಪ್ಪಿನಕಾಯಿಯನ್ನು ಮಳೆಗಾಲ ಬರುವ ತನಕ ಮುಟ್ಟಬಾರದು.' ಎನ್ನುತ್ತಿದ್ದರು ಅಮ್ಮಮ್ಮಾ. ದಿನದ ಉಪಯೋಗಕ್ಕೆ ಬೇರೆ ಚಿಕ್ಕ ಮರಿಗೆಯಲ್ಲಿ ಸ್ವಲ್ಪ ಉಪ್ಪಿನಕಾಯಿ ಹಾಕಿಡುತ್ತಿದ್ದರು. ಮುಖ್ಯವಾಗಿ ಮಿಡಿ ಉಪ್ಪಿನಕಾಯಿಯನ್ನು ಸಾಧ್ಯವಾದಷ್ಟು ದಿನ ಕಾಪಿಡುವುದೇ ಒಂದು ಹೆಮ್ಮೆಯ ವಿಚಾರ. `ಎರಡು ವರ್ಷ ಇಟ್ಟರೂ ಈ ಉಪ್ಪಿನಕಾಯಿ ಲಾಯಕ್ ಇರತ್' ಎನ್ನುವಾಗ ಅಮ್ಮಮ್ಮನಿಗೆ ಹೆಮ್ಮೆ. ಜಾಸ್ತಿ ಮಾವಿನ ಮಿಡಿಗಳು ಸಿಗುವ ವರ್ಷ ಸ್ವಲ್ಪ ಹೆಚ್ಚಾಗಿಯೇ ಉಪ್ಪಿನಕಾಯಿ ಮಾಡಿ ಬಂಧುಗಳಿಗೆ ಸ್ನೇಹಿತರಿಗೆ ಸ್ವಲ್ಪ ಕಳಿಸಿಕೊಡುವುದೂ ಉಂಟು. ಅಕ್ಕಪಕ್ಕದ ಮನೆಗಳಿಗೂ ಕೊಡುತ್ತಿದ್ದರು. ಆಸಾಡಿಯ ಮಳೆ ಬೀಳುವಾಗ ಹಿಂದಿನ ಮನೆಯ ನರ್ಸಿ ಬಂದು `ನಮ್ಮ ಲಚ್ಚುಗೆ ಸ್ವರ ಬಂದ್ ಬಾಯಿ ರುಚಿ ಇಲ್ಲೆ ಕಾಣಿ, ಒಂಚೂರು ಉಪ್ಪಿನಕಾಯಿ ಕೊಡಿನಿ' ಎಂದು ಅಂಗಲಾಚಿದಾಗ ಅಮ್ಮಾಮ್ಮ ಇಲ್ಲ ಅನ್ನುವವರಲ್ಲ. ಚಿಕ್ಕ ಲೋಟದಲ್ಲಿ ಸ್ವಲ್ಪ ರಸ ಜಾಸ್ತಿಯೇ ಹಾಕಿ ನಾಲ್ಕೆಂಡು ಮಿಡಿ ಉಪ್ಪಿನ ಕಾಯಿಯನ್ನು ಕೊಡುತ್ತಿದ್ದರು. “ನಿಮ್ಮ ಉಪ್ಪಿನಕಾಯಿ ತಿಂದೇ ನಮ್ಮ ಲಚ್ಚು ಜ್ವರ ಬಿಡ್ತ್ ಕಾಣಿ “ ಎಂದು ನಂತರ ನರ್ಸಿ ಜಾಪಿನಿಂದ ಹೊಗಳುತ್ತಿದ್ದುದೂ ಉಂಟು.
ಒಳ್ಳೆಯ ಮಿಡಿ ಉಪ್ಪಿನಕಾಯಿಯಲ್ಲಿ ಔಷಧೀಯ ಗುಣವೂ ಉಂಟು ಎನ್ನುತ್ತಾರೆ. ಅದಕ್ಕೆ ಬೆರೆಸುವ ಸಾಸಿವೆ, ಇಂಗು ಮೊದಲಾದ ಪರಿಕರಗಳ ಔಷಧೀಯ ಗುಣದ ಜೊತೆ ಮಾವಿನ ಮಿಡಿಯಲ್ಲೂ ಔಷಧೀಯ ಗುಣಗಳು ಇರಲಿಕ್ಕೆ ಬೇಕು. ಮಾವಿನಕಾಯಿಯ ಸೊನೆ ಪರಿಮಳವೇ ಮೂಗಿನ ನೆಗಡಿತನವನ್ನು ದೂರ ಓಡಿಸೀತು! ಒಳ್ಳೆಯ ಅಪ್ಪೆಮಿಡಿ ಚೊಟ್ಟನ್ನು ಮುರಿದಾಗ ಬರುವ ರಸಕ್ಕೆ ಬೆಂಕಿ ತೋರಿಸಿದರೆ ಪೆಟ್ರೋಲಿನ ರೀತಿ ರಸವು ದಹಿಸುತ್ತದೆ. ಜೀರಿಗೆ ಮಾವಿನಮಿಡಿ ಅಪ್ಪೆ ಮಿಡಿಗಳ ಪರಿಮಳವು ಅವುಗಳಲ್ಲಿರುವ ವಿಶಿಷ್ಟ ರಾಸಾಯನಿಕ ವಸ್ತುಗಳ ಮಿಶ್ರಣದಿಂದಲೇ ಬರುವುದು ತಾನೆ. ಅವುಗಳಿಂದ ಮಾಡಿದ ಉಪ್ಪಿನಕಾಯಿ ರಸವನ್ನು ಮಾತ್ರ ಬಳಸಿ ಅನ್ನ ಕಲಸಿ ಊಟ ಮಾಡಿದ ರೋಗಿಗಳು ಬೇಗನೆ ಗುಣಹೊಂದಿದರೆ ಅಚ್ಚರಿಯೇನು ಇಲ್ಲ. ತರಕಾರಿಗಳು ದುರ್ಲಭವಾಗಿದ್ದ ಮಳೆಗಾಲದಲ್ಲಿ ಉಪ್ಪಿನಕಾಯಿ ರಸದಲ್ಲಿ ಕಲಸಿದ ಅನ್ನ ನಿಜಕ್ಕೂ ರುಚಿಕರ. ಇತ್ತ ಮಜ್ಜಿಗೆ ಅನ್ನಕ್ಕೂ ನಂಜಿಕೊಳ್ಳಲು ಮಾವಿನಮಿಡಿಯು ಪ್ರಶಸ್ತ!
ನಮ್ಮ ಮನೆಯ ಮೂಲೆಗದ್ದೆಯ ಅಂಚಿನಲ್ಲಿ ಎತ್ತರವಾದ ಒಂದು ಕಾಟುಮಾವಿನ ಮರವಿತ್ತು. ಅದರ ಮಿಡಿಗಳು ಒಳ್ಳೆಯ ಅಪ್ಪೆ ಮಿಡಿಯ ರುಚಿಯುಳ್ಳದ್ದು ಎನ್ನುತ್ತಿದ್ದರು. ಆದರೆ ಆ ಎತ್ತರದ ಮರದಲ್ಲಿ ಮಿಡಿ ಬಿಟ್ಟಿದ್ದನ್ನೇ ನಾನು ಕಂಡಿಲ್ಲ. ಅದರಲ್ಲಿ ಜಾಸ್ತಿ ಕಾಯಿ ಆಗುವುದಿಲ್ಲ ಎಂಬ ಸಿಟ್ಟಿನಿಂದ ಪ್ರತಿವರ್ಷ ಅದರ ಟೊಂಗೆಗಳನ್ನು ಕಡಿದು ಸುಡುಮಣ್ಣನ್ನು ಮಾಡಿಸುತ್ತಿದ್ದರು ಅಥವಾ ತೋಟದ ಬುಡಮಾಡಲು ಉಪಯೋಗಿಸುತ್ತಿದ್ದರು. ನಮ್ಮ ಮನೆಯ ಹತ್ತಿರವೇ ತೋಟದ ಮೂಲೆಯಲ್ಲಿ ಎರಡು ದೊಡ್ಡ ಕಾಟು ಮಾವಿನ ಮರಗಳಿದ್ದವು. ಒಂದರಲ್ಲಿ ಮಿಡಿ ಕಡಿಮೆ, ಇನ್ನೊಂದರಲ್ಲಿ ಸಾವಿರಾರು ಮಿಡಿಗಳು ಆಗುತ್ತಿದ್ದವು. ಆದರೆ ಆ ಮಿಡಿಗಳಿಗೆ ಪರಿಮಳ ಕಡಿಮೆ; ರುಚಿಯೂ ಕಡಿಮೆ. ಬರೀ ಹುಳಿಯೊಂದೇ ಆ ಮಾವಿನ ಮಿಡಿಗಳ ವಿಶೇಷ. ಅದು `ದಿಂಡಿನಕಾಯಿ' ಎಂದು ಶೃಂಗೇರಿ ಚಿಕ್ಕಮ್ಮ ಹೇಳಿದರು. ತಮ್ಮ ಊರಿನ ಕಡೆಯ ಯಾವುದೋ ಮಾವಿನ ಮರಕ್ಕೆ ಹೋಲಿಸುತ್ತಾ ಸ್ವಲ್ಪ ಒಳ್ಳೆಯ ಪರಿಮಳವಿರುವ ಮಿಡಿಬೇಕೆಂದಾಗ ಅಬ್ನಿಕಟ್ಟೆ ಅಥವಾ ತಾರಿಕಟ್ಟೆಯಿಂದ ಮಾವಿನ ಮಿಡಿಗಳನ್ನು ಅಮ್ಮಮ್ಮ ತರಿಸುತ್ತಿದ್ದರು. ಸಾಕಷ್ಟು ಉಪ್ಪಿನಕಾಯಿ ಮಾಡಿದ ಮೇಲೂ ಎಲ್ಲಾದರೂ ಒಳ್ಳೆಯ ಮಾವಿನ ಮಿಡಿ ಸಿಕ್ದಿದರೆ, ತರಿಸಿ ಚೊಟ್ಟು ಕತ್ತರಿಸಿ ಉಪ್ಪಿನಲ್ಲಿ ನೆನಸಿಯೇ ಬಿಡುತ್ತಾರೆ. `ಎರಡು ವರ್ಷ ಇಟ್ಟರೂ ಮಿಡಿ ಉಪ್ಪಿನಕಾಯಿ ಹಾಳಾತಿಲ್ಲೆ' ಎನ್ನುತ್ತಾ ಮೆಣಸಿನ ಕಾಯಿ ಅರೆದು ಮಿಡಿಯ ಜೊತೆಗೆ ಪಿಂಗಾಣಿ ಜಾಲಿಗೆ ತುಂಬಿಸುತ್ತಾರೆ. ಮಾವಿನ ಮಿಡಿ ಎಂದರೆ ಅಮ್ಮಮ್ಮಾನಿಗೆ ಎಲ್ಲಿಲ್ಲದ ಅಂಗಲಾಪು.
- ಎಂ. ಶಶಿಧರ ಹೆಬ್ಬಾರ್ ಹಾಲಾಡಿ
ಗೋರಾಜೆ ಶಾಲೆಯಿಂದ ಮನೆಗೆ ವಾಪಾಸು ಬರುವಾಗ, ಹುಡುಗರಲ್ಲಿ ಒಂದು ಸುದ್ಧಿ ಹಬ್ಬಿತು. `ಮುತ್ತಯ್ಯ ಶೆಟ್ರ ಮನೆ ಹತ್ತಿರ ಮಾವಿನಮಿಡಿ ಕೊಯ್ತರಂಬ್ರು' ನಮ್ಮ ಹುಡುಗರ ಸೈನ್ಯ, ದಾರಿ ಬದಲಿಸಿ, ನೆಟ್ಟಗೆ ಮುಡಾರಿಯ ಹಾಡಿದಾರಿ ಹಿಡಿದು, ಮುತ್ತಯ್ಯ ಶೆಟ್ರ ಮನೆ ಹತ್ತಿರ ಸಾಗಿತು. ಗುಡ್ಡೆ ಬದಿಯ ಎತ್ತರವಾದ ಮಾವಿನ ಮರದಲ್ಲಿ ಯಾರೋ ಕುಳಿತು ಮಾವಿನ ಮಿಡಿಗಳನ್ನು ಕೊಯ್ಯುತ್ತಿದ್ದುದು ದೂರದಿಂದಲೇ ಕಾಣುತ್ತಿತ್ತು. ಮರದ ಬುಡಕ್ಕೆ ಹೋಗಿ ನೋಡಿದರೆ ನಾಲ್ಕೆಂಟು ಮಂದಿ ನೆರೆಹೊರೆಯವರು ಚೀಲ ಅಥವಾ ಕುಕ್ಕೆ ಹಿಡಿದುಕೊಂದು ತಲೆ ಮೇಲೆತ್ತಿ, ಮಾವಿನ ಮರದ ತುದಿಯನ್ನೇ ನೋಡುತ್ತಿದ್ದರು. ಮೇಲೇರಿದಾತ ಮಾವಿನ ಮಿಡಿಯನ್ನು ಕೊಯ್ಯುತ್ತಿದ್ದ. ಅವನ ಕೈ ತಪ್ಪಿ ಕೆಳಗೆ ಬಿದ್ದಿದ್ದ ಮಿಡಿಗಳನ್ನು ನಾವೆಲ್ಲ ಆರಿಸಿ ತಿನ್ನುತ್ತಿದ್ದೆವು. ಮಕ್ಕಳೆಲ್ಲ ಮನೆಗೆ ಹೋಯಿನಿ? ಎಂದು ಗದರಿಸಿದ್ದು ಯಾರೆಂದು ನೋಡಿದರೆ ನಮ್ಮ ಅಮ್ಮಮ್ಮಾ ಮಾವಿನ ಮಿಡಿ ತರಲು ಅವರೂ ಬಂದು, ಆ ಮರದ ಬುಡದಲ್ಲಿ ನಿಂತಿದ್ದರು. ನಾಲ್ಕಾರು ಮಿಡಿತಿಂದು ನಾವೆಲ್ಲ ಮನೆಗೆ ಹೋದೆವು. ಸ್ವಲ್ಪ ಹೊತ್ತಾದ ನಂತರ ಒಂದು ಕುಕ್ಕೆಯ ತುಂಬ ಮಾವಿನ ಮಿಡಿಯ ವಾಸನೆ ಘಂ ಎಂದು ತುಂಬಿಕೊಂಡಿತು. ಅದಾಗಲೇ ಸಂಜೆಗತ್ತಲು. ಅಮ್ಮಮ್ಮ ಮೆಟ್ಟು ಕತ್ತಿಯ ಮುಂದೆ ಕುಳಿತು, ಮಾವಿನ ಮಿಡಿಗಳನ್ನು ಸೋಸಲು ತೊಡಗಿದರು. `ಇವತ್ತು ರಾತ್ರಿಯೇ ಉಪ್ಪಿಗೆ ಹಾಕಿ ಇಡ್ಕ್ , ಮತ್ತೆ ಹಾಂಗೆ ಬಿಟ್ರೆ ಮಿಡಿ ಹಾಳಾತ್' ಎನ್ನುತ್ತಾ ಒಂದೊಂದೇ ಮಿಡಿಯನ್ನು ಆರಿಸಿ ಅದರ ಬೊಟ್ಟು ಎಷ್ಟು ಬೇಕೋ ಉಳಿಸಿಕೊಂಡು ದಂಟನ್ನು ಕತ್ತರಿಸಿ ಮತ್ತೊಂದು ಕಡೆ ರಾಶಿ ಹಾಕುತ್ತಿದ್ದರು.
ಉಪ್ಪಿನಕಾಯಿ ಮಾಡಲು ಆರಿಸುವ ಮಾವಿನ ಮಿಡಿಗೆ ಅದರದ್ದೇ ಆದ ಒಂದು ಹದ ಇದೆ, ಮಿಡಿಗಳು ಹದವಾಗಿ ಬಲಿತಿರಬೇಕು. ಒಳಗಿರುವ ಕೊಂಗಿಲ ಸ್ವಲ್ಪ ಮೃದುವಾಗಿರಬೇಕು. ಗೊರಟು ಆಗಲು ಆರಂಭವಾಗಿರಬಾರದು. ಮಿಡಿ ಕೊಯ್ಯುವಾಗ ಮಿಡಿಗೆ ಗಾಯವಾಗಿರಬಾರದು, ಮಾವಿನ ಮಿಡಿ ಬಿಸಿಲಿಗೆ ಸುಟ್ಟ್ಟು ಕಪ್ಪಾಗಿರಬಾರದು, ಸೊನೆ ಸುಟ್ಟಿರಬಾರದು. ಒಂದೇ ಗಾತ್ರದ ಮಿಡಿಗಳನ್ನು ಆರಿಸಿ ಪ್ರತ್ಯೇಕಿಸಿದ ನಂತರ ಅಮ್ಮಮ್ಮ ಉಪ್ಪಿನ ಭರಣಿಯಲ್ಲಿ ತುಂಬುತ್ತಿದ್ದರು.
ದೊಡ್ಡ ಪಾತ್ರೆಗೆ ತಳದಲ್ಲಿ ಸ್ವಲ್ಪ ಕಲ್ಲು ಉಪ್ಪನ್ನು ಹಾಕಿ, ಅದರ ಮೇಲೆ ಒಂದು ಪದರ ಮಾವಿನ ಮಿಡಿ ಹಾಕುತ್ತಾರೆ. ಅದರ ಮೇಲೆ ಪುನಃ ಒಂದಿಂಚು ಉಪ್ಪಿನ ಪದರ ಅದರ ಮೇಲೆ ಮಿಡಿ ಪುನಃ ಉಪ್ಪಿನ ಪದರ ಈ ರೀತಿ ಪಾತ್ರೆ ತುಂಬುವ ತನಕ ಮಿಡಿ ಮತ್ತು ಉಪ್ಪು ತುಂಬಿಸಿ ಪಾತ್ರೆಯ ಮೇಲೆ ಭಾರಕ್ಕೆಂದು ಸೀತಾನದಿಯಿಂದ ತಂದ ದೊಡ್ಡ ಒರೆಯುವ ಕಲ್ಲುಗಳನ್ನು ಇಡುತ್ತಾರೆ , ಆ ಕಲ್ಲುಗಳ್ಯಾಕೆ `ಮಿಡಿ ಸಮಾ ಚಿರುಟಬೇಕು'.
ಒಂದೆರಡು ದಿನ ಉಪ್ಪಿನಲ್ಲಿ ಕುಳಿತ ಮಿಡಿಗಳು ಚಿರುಟುತ್ತವೆ, ಕಲ್ಲು ಉಪ್ಪು ಮಿಡಿಯ ನೀರನ್ನು ಹೀರಿಕೊಂಡು ಪಾತ್ರೆಯ ತುಂಬಾ ಉಪ್ಪಿನ ನೀರು ತುಂಬುತ್ತದೆ.-ಮಾವಿನ ಮಿಡಿಗಳು ಗಾತ್ರದಲ್ಲಿ ಚಿಕ್ಕದಾಗಿ ಚಿರುಟುತ್ತವೆ. ಆ ಮಿಡಿಗಳನ್ನು ಆರಿಸಿ ನೆರಳಿನಲ್ಲಿ ಒಣಗಿಸಬೇಕು. ಅಮ್ಮಮ್ಮಾ ಮಿಡಿಗಳನ್ನು ಆರಲು ಹಾಕುತ್ತಿದ್ದ ಜಾಗವೆಂದರೆ ಮಧ್ಯದ ಪಡಸಾಲೆಯ ನೆಲದಲ್ಲಿ. ಉಪ್ಪಿನಲ್ಲಿ ಚಿರುಟಿದ ಮಿಡಿಗಳು ಪಡಸಾಲೆಯ ನೆಲದಲ್ಲಿ ಹರಡಿಕೊಂಡಾಗ ಮನೆ ತುಂಬ ಆ ಮಿಡಿಯದೇ ಪರಿಮಳ. ಅಮ್ಮಮ್ಮನ ಕಣ್ಣು ತಪ್ಪಿಸಿ ನಾವು ಒಂದೊಂದೇ ಮಿಡಿಯನ್ನು ತಿನ್ನುವುದು ಉಂಟು. ನೀರಿಗೆ ಹಾಕಿದ ಮಿಡಿಗಳಲ್ಲಿ ಒಂದೊಂದು ಬಣ್ಣಗೆಟ್ಟು ನೀರು ನೀರಾಗಿ ಇರುತ್ತಿತ್ತು. ಅದನ್ನು ತಿನ್ನಲು ಪರವಾನಗಿ ಉಂಟು, ಏಕೆಂದರೆ ಆ ಮಿಡಿಯನ್ನು ಉಪ್ಪಿನಕಾಯಿ ಮಾಡಿದರೆ ಬೇಗ ಕೆಟ್ಟು ಹೋಗುತ್ತದಂತೆ.
`ಮಿಡಿ ನೆನಸಿದರೆ ಸಾಕಾ? ಮೆಣಸಿನ ಕಾಯಿ ತರ್ಕಲೆ? ಅಂಗಡಿಯಿಂದ ಒಳ್ಳೆಯ ಮೆಣಸಿನ ಕಾಯಿ ತಂದು ಉಪ್ಪಿನಕಾಯಿ ಮಾಡುವ ಸಂಭ್ರಮ. ಮೆಣಸಿನ ಕಾಯಿಯನ್ನು ಚೆನ್ನಾಗಿ ಒಣಗಿಸಿ ಅದನ್ನು ಸ್ವಲ್ಪ ಕುಟ್ಟಿ ನಂತರ ಅರೆಯುವ ಕಲ್ಲಿನಲ್ಲಿ ಹಾಕಿ ಅರೆಯುವಿಕೆ! ಆಗ ಇನ್ನೂ ಮೆಣಸಿನ ಪುಡಿ ಮಾಡುವ ಮಿಲ್ ನಮ್ಮೂರಿಗೆ ಬಂದಿರಲಿಲ್ಲ. ದೊಡ್ಡ ಅರೆಯುವ ಕಲ್ಲಿನಲ್ಲಿ ಮೆಣಸಿನ ಕಾಯಿ ಹಾಕಿ ಕುದಿಸಿದ ಉಪ್ಪು ನೀರನ್ನು ಬೆರೆಸಿ, ಚೆನ್ನಾಗಿ ಅರೆಯುವ ಕೆಲಸ ನಿಜಕ್ಕೂ ಕಷ್ಟದ್ದು. ಅರೆಯುವಾಗ ಸಾಸಿವೆ, ಇಂಗು ಬೆರೆಸುತ್ತಿದ್ದರು. ಅರೆದು ಅರೆದು ಒಳ್ಳೆಯ ಉಪ್ಪಿನಕಾಯಿ ರಸ ತಯಾರಾದಾಗ ಪಿಂಗಾಣಿ ಜಾಲಿ ಅಟ್ಟದಿಂದ ಕೆಳಗಿಳಿಯುತ್ತದೆ. ಚೊಕ್ಕಟ ಮಾಡಿದ ದೊಡ್ಡ ಜಾಲಿಯಲ್ಲಿ ಚಿರುಟಿದ ಮಾವಿನ ಮಿಡಿಗಳನ್ನು ಹಾಕಿ, ಮೆಣಸಿನ ಕಾಯಿ ರಸವನ್ನು ತುಂಬಿಸಿದರೆ ಉಪ್ಪಿನಕಾಯಿ ತಯಾರು. ಪಿಂಗಾಣಿ ಭರಣಿಯ ಬಾಯಿಗೆ ಬಟ್ಟೆ ಸುತ್ತಿ ಮುಚ್ಚಳವನ್ನು ಭದ್ರವಾಗಿ ತಿರುಪಿ, ಪುನಃ ಅಟ್ಟದ ಮೇಲೆ ಇಡುತ್ತಾರೆ. `ಅದೇನಿದ್ದರೂ ಈ ಜಾಲಿಯ ಉಪ್ಪಿನಕಾಯಿಯನ್ನು ಮಳೆಗಾಲ ಬರುವ ತನಕ ಮುಟ್ಟಬಾರದು.' ಎನ್ನುತ್ತಿದ್ದರು ಅಮ್ಮಮ್ಮಾ. ದಿನದ ಉಪಯೋಗಕ್ಕೆ ಬೇರೆ ಚಿಕ್ಕ ಮರಿಗೆಯಲ್ಲಿ ಸ್ವಲ್ಪ ಉಪ್ಪಿನಕಾಯಿ ಹಾಕಿಡುತ್ತಿದ್ದರು. ಮುಖ್ಯವಾಗಿ ಮಿಡಿ ಉಪ್ಪಿನಕಾಯಿಯನ್ನು ಸಾಧ್ಯವಾದಷ್ಟು ದಿನ ಕಾಪಿಡುವುದೇ ಒಂದು ಹೆಮ್ಮೆಯ ವಿಚಾರ. `ಎರಡು ವರ್ಷ ಇಟ್ಟರೂ ಈ ಉಪ್ಪಿನಕಾಯಿ ಲಾಯಕ್ ಇರತ್' ಎನ್ನುವಾಗ ಅಮ್ಮಮ್ಮನಿಗೆ ಹೆಮ್ಮೆ. ಜಾಸ್ತಿ ಮಾವಿನ ಮಿಡಿಗಳು ಸಿಗುವ ವರ್ಷ ಸ್ವಲ್ಪ ಹೆಚ್ಚಾಗಿಯೇ ಉಪ್ಪಿನಕಾಯಿ ಮಾಡಿ ಬಂಧುಗಳಿಗೆ ಸ್ನೇಹಿತರಿಗೆ ಸ್ವಲ್ಪ ಕಳಿಸಿಕೊಡುವುದೂ ಉಂಟು. ಅಕ್ಕಪಕ್ಕದ ಮನೆಗಳಿಗೂ ಕೊಡುತ್ತಿದ್ದರು. ಆಸಾಡಿಯ ಮಳೆ ಬೀಳುವಾಗ ಹಿಂದಿನ ಮನೆಯ ನರ್ಸಿ ಬಂದು `ನಮ್ಮ ಲಚ್ಚುಗೆ ಸ್ವರ ಬಂದ್ ಬಾಯಿ ರುಚಿ ಇಲ್ಲೆ ಕಾಣಿ, ಒಂಚೂರು ಉಪ್ಪಿನಕಾಯಿ ಕೊಡಿನಿ' ಎಂದು ಅಂಗಲಾಚಿದಾಗ ಅಮ್ಮಾಮ್ಮ ಇಲ್ಲ ಅನ್ನುವವರಲ್ಲ. ಚಿಕ್ಕ ಲೋಟದಲ್ಲಿ ಸ್ವಲ್ಪ ರಸ ಜಾಸ್ತಿಯೇ ಹಾಕಿ ನಾಲ್ಕೆಂಡು ಮಿಡಿ ಉಪ್ಪಿನ ಕಾಯಿಯನ್ನು ಕೊಡುತ್ತಿದ್ದರು. “ನಿಮ್ಮ ಉಪ್ಪಿನಕಾಯಿ ತಿಂದೇ ನಮ್ಮ ಲಚ್ಚು ಜ್ವರ ಬಿಡ್ತ್ ಕಾಣಿ “ ಎಂದು ನಂತರ ನರ್ಸಿ ಜಾಪಿನಿಂದ ಹೊಗಳುತ್ತಿದ್ದುದೂ ಉಂಟು.
ಒಳ್ಳೆಯ ಮಿಡಿ ಉಪ್ಪಿನಕಾಯಿಯಲ್ಲಿ ಔಷಧೀಯ ಗುಣವೂ ಉಂಟು ಎನ್ನುತ್ತಾರೆ. ಅದಕ್ಕೆ ಬೆರೆಸುವ ಸಾಸಿವೆ, ಇಂಗು ಮೊದಲಾದ ಪರಿಕರಗಳ ಔಷಧೀಯ ಗುಣದ ಜೊತೆ ಮಾವಿನ ಮಿಡಿಯಲ್ಲೂ ಔಷಧೀಯ ಗುಣಗಳು ಇರಲಿಕ್ಕೆ ಬೇಕು. ಮಾವಿನಕಾಯಿಯ ಸೊನೆ ಪರಿಮಳವೇ ಮೂಗಿನ ನೆಗಡಿತನವನ್ನು ದೂರ ಓಡಿಸೀತು! ಒಳ್ಳೆಯ ಅಪ್ಪೆಮಿಡಿ ಚೊಟ್ಟನ್ನು ಮುರಿದಾಗ ಬರುವ ರಸಕ್ಕೆ ಬೆಂಕಿ ತೋರಿಸಿದರೆ ಪೆಟ್ರೋಲಿನ ರೀತಿ ರಸವು ದಹಿಸುತ್ತದೆ. ಜೀರಿಗೆ ಮಾವಿನಮಿಡಿ ಅಪ್ಪೆ ಮಿಡಿಗಳ ಪರಿಮಳವು ಅವುಗಳಲ್ಲಿರುವ ವಿಶಿಷ್ಟ ರಾಸಾಯನಿಕ ವಸ್ತುಗಳ ಮಿಶ್ರಣದಿಂದಲೇ ಬರುವುದು ತಾನೆ. ಅವುಗಳಿಂದ ಮಾಡಿದ ಉಪ್ಪಿನಕಾಯಿ ರಸವನ್ನು ಮಾತ್ರ ಬಳಸಿ ಅನ್ನ ಕಲಸಿ ಊಟ ಮಾಡಿದ ರೋಗಿಗಳು ಬೇಗನೆ ಗುಣಹೊಂದಿದರೆ ಅಚ್ಚರಿಯೇನು ಇಲ್ಲ. ತರಕಾರಿಗಳು ದುರ್ಲಭವಾಗಿದ್ದ ಮಳೆಗಾಲದಲ್ಲಿ ಉಪ್ಪಿನಕಾಯಿ ರಸದಲ್ಲಿ ಕಲಸಿದ ಅನ್ನ ನಿಜಕ್ಕೂ ರುಚಿಕರ. ಇತ್ತ ಮಜ್ಜಿಗೆ ಅನ್ನಕ್ಕೂ ನಂಜಿಕೊಳ್ಳಲು ಮಾವಿನಮಿಡಿಯು ಪ್ರಶಸ್ತ!
ನಮ್ಮ ಮನೆಯ ಮೂಲೆಗದ್ದೆಯ ಅಂಚಿನಲ್ಲಿ ಎತ್ತರವಾದ ಒಂದು ಕಾಟುಮಾವಿನ ಮರವಿತ್ತು. ಅದರ ಮಿಡಿಗಳು ಒಳ್ಳೆಯ ಅಪ್ಪೆ ಮಿಡಿಯ ರುಚಿಯುಳ್ಳದ್ದು ಎನ್ನುತ್ತಿದ್ದರು. ಆದರೆ ಆ ಎತ್ತರದ ಮರದಲ್ಲಿ ಮಿಡಿ ಬಿಟ್ಟಿದ್ದನ್ನೇ ನಾನು ಕಂಡಿಲ್ಲ. ಅದರಲ್ಲಿ ಜಾಸ್ತಿ ಕಾಯಿ ಆಗುವುದಿಲ್ಲ ಎಂಬ ಸಿಟ್ಟಿನಿಂದ ಪ್ರತಿವರ್ಷ ಅದರ ಟೊಂಗೆಗಳನ್ನು ಕಡಿದು ಸುಡುಮಣ್ಣನ್ನು ಮಾಡಿಸುತ್ತಿದ್ದರು ಅಥವಾ ತೋಟದ ಬುಡಮಾಡಲು ಉಪಯೋಗಿಸುತ್ತಿದ್ದರು. ನಮ್ಮ ಮನೆಯ ಹತ್ತಿರವೇ ತೋಟದ ಮೂಲೆಯಲ್ಲಿ ಎರಡು ದೊಡ್ಡ ಕಾಟು ಮಾವಿನ ಮರಗಳಿದ್ದವು. ಒಂದರಲ್ಲಿ ಮಿಡಿ ಕಡಿಮೆ, ಇನ್ನೊಂದರಲ್ಲಿ ಸಾವಿರಾರು ಮಿಡಿಗಳು ಆಗುತ್ತಿದ್ದವು. ಆದರೆ ಆ ಮಿಡಿಗಳಿಗೆ ಪರಿಮಳ ಕಡಿಮೆ; ರುಚಿಯೂ ಕಡಿಮೆ. ಬರೀ ಹುಳಿಯೊಂದೇ ಆ ಮಾವಿನ ಮಿಡಿಗಳ ವಿಶೇಷ. ಅದು `ದಿಂಡಿನಕಾಯಿ' ಎಂದು ಶೃಂಗೇರಿ ಚಿಕ್ಕಮ್ಮ ಹೇಳಿದರು. ತಮ್ಮ ಊರಿನ ಕಡೆಯ ಯಾವುದೋ ಮಾವಿನ ಮರಕ್ಕೆ ಹೋಲಿಸುತ್ತಾ ಸ್ವಲ್ಪ ಒಳ್ಳೆಯ ಪರಿಮಳವಿರುವ ಮಿಡಿಬೇಕೆಂದಾಗ ಅಬ್ನಿಕಟ್ಟೆ ಅಥವಾ ತಾರಿಕಟ್ಟೆಯಿಂದ ಮಾವಿನ ಮಿಡಿಗಳನ್ನು ಅಮ್ಮಮ್ಮ ತರಿಸುತ್ತಿದ್ದರು. ಸಾಕಷ್ಟು ಉಪ್ಪಿನಕಾಯಿ ಮಾಡಿದ ಮೇಲೂ ಎಲ್ಲಾದರೂ ಒಳ್ಳೆಯ ಮಾವಿನ ಮಿಡಿ ಸಿಕ್ದಿದರೆ, ತರಿಸಿ ಚೊಟ್ಟು ಕತ್ತರಿಸಿ ಉಪ್ಪಿನಲ್ಲಿ ನೆನಸಿಯೇ ಬಿಡುತ್ತಾರೆ. `ಎರಡು ವರ್ಷ ಇಟ್ಟರೂ ಮಿಡಿ ಉಪ್ಪಿನಕಾಯಿ ಹಾಳಾತಿಲ್ಲೆ' ಎನ್ನುತ್ತಾ ಮೆಣಸಿನ ಕಾಯಿ ಅರೆದು ಮಿಡಿಯ ಜೊತೆಗೆ ಪಿಂಗಾಣಿ ಜಾಲಿಗೆ ತುಂಬಿಸುತ್ತಾರೆ. ಮಾವಿನ ಮಿಡಿ ಎಂದರೆ ಅಮ್ಮಮ್ಮಾನಿಗೆ ಎಲ್ಲಿಲ್ಲದ ಅಂಗಲಾಪು.
- ಎಂ. ಶಶಿಧರ ಹೆಬ್ಬಾರ್ ಹಾಲಾಡಿ
Bekkina Bananthana
Subscribe to:
Comments (Atom)
